Thursday, January 4, 2007

ಹನ್ನೆರಡನೇಯ ಶತಮಾನ ನೆನಪಿಸುವ ಶರಣಮೇಳ


ಪ್ರಭುಪ್ರಸಾದ ಬಿ.
(ಕೂಡಲ ಸಂಗಮದಲ್ಲಿ ಇದೇ ತಿಂಗಳು 11ರಿಂದ 15ನೇ ತಾರಿಖಿನವರೆಗೆ ಜರುಗಲಿರುವ ಇಪ್ಪತ್ತನೇಯ ಶರಣಮೇಳದ ನಿಮಿತ್ತ ಈ ಲೇಖನ )


'ಭಾರತದ ಪ್ರಪ್ರಥಮ ಸ್ವಾತಂತ್ರ ವಿಚಾರವಾದಿ' ಎಂದು ಬ್ರೀಟಿಷ ತತ್ವಜ್ಞಾನಿ ಆರ್ಥರ ಮೈಲ್ಸ್ ಹಾಡಿ ಹೊಗಳಿದ ವಿಶ್ವಗುರು ಮಹಾಮಾನವತಾವಾದಿ ಗುರು ಬಸವಣ್ಣನವರ ವಿದ್ಯಾಭೂಮಿ,ತಪೊಸ್ಥಾನ,ಐಕ್ಯ ಸ್ಥಾನವಾದ ಕೂಡಲಸಂಗಮದಲ್ಲಿ ಇದೆ ತಿಂಗಳು 11ರಿಂದ 15ರವರೆಗೆ ಐದು ದಿನಗಳ ಕಾಲ ವಿಜ್ರಂಭಣೆಯಿಂದ 20ನೇಯ ಶರಣಮೇಳ ಮತ್ತೋಮ್ಮೆ ಹನ್ನೆರಡನೇಯ ಶತಮಾನವನ್ನು ನೆನಪಿಸುವ ನಿಟ್ಟಿನಲ್ಲಿ ಜರುಗಲಿದೆ.

ಬಂದಿರುವ ಎಲ್ಲ ಭಕ್ತರು ಬಿಳಿ ಸಮವಸ್ತ್ರ ಧರಿಸಿ ಮೇಲೊಂದು ಕಾವಿಯ ಸ್ಕಾರ್ಪನ್ನು ಹಾಕಿಕೊಂಡು ತಮಗೆದುರಾದ ಎಲ್ಲರಿಗೂ ವಿಧೇಯರಾಗಿ ಶರಣು ಶರಣಾರ್ಥಿ ಎಂದು ಹೃದಯತುಂಬಿ ಹೇಳುತ್ತಿರುವಾಗ ನಾವು ನಿಜಕ್ಕೂ ಹನ್ನೆರಡನೇಯ ಶತಮಾನದಲ್ಲಿದ್ದೇವೆ ಎಂದು ಒಂದು ಕ್ಷಣ ಅನ್ನಿಸದೆ ಇರದು.ಅಂತಹ ಹನ್ನೆರಡನೇಯ ಶತಮಾನದ ನೆನಪನ್ನು ಮರಕಳಿಸುವಂತಹ ಅದ್ಬುತ ಶರಣ ಸಂಸ್ಕ್ಟತಿಯ ಉತ್ಸವವೇ ಈ ಶರಣಮೇಳ.
'ಪ್ರವಚನ ಪಿತಾಮಹ' ಎಂದೆ ನಾಡಿನ ಭಕ್ತ ಮಾನಸದಲ್ಲಿ ಬಿಂಬಿತವಾದ ಬಸವ ಧರ್ಮಪೀಠದ ಪ್ರಪ್ರಥಮ ಪೀಠಾಧೀಶರಾದ ಪೂಜ್ಯ ಶ್ರೀ ಲಿಂಗೈಕ್ಯ ಲಿಂಗಾನಂದ ಮಹಾ ಸ್ವಾಮೀಜಿಯವರ ಹಾಗೂ ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು,ಕ್ರಾಂತಿಕಾರಿ ವಿಚಾರವಾಧಿಗಳು,'ಮಾತಾಜಿ' ಎಂದೆ ಭಕ್ತ ಸಮೂಹದಲ್ಲಿ ಬಿಂಬಿಸಲ್ಪಡುವ ಮಾತೆ ಮಹಾದೇವಿಯವರ ದೂರದೃಷ್ಟಿಯ ಫಲವಾಗಿ 1988ರಲ್ಲಿ ಆರಂಭವಾದ ಪ್ರಥಮ ಶರಣಮೇಳ ಇಂದು ಇಪ್ಪತರ ಹರೆಯದ ಪ್ರವರ್ಧಮಾನಕ್ಕೆ ಕಾಲಿಟ್ಟಿದೆ.

ವರ್ಷಕ್ಕೊಮ್ಮೆ ಮೆಕ್ಕಾದಲ್ಲಿ ಮುಸ್ಲಿಂರು,ಜೆರುಸಲೆಂನಲ್ಲಿ ಕ್ರೈಸ್ತರು ಸೇರುವಂತೆ,ಜಾಗತೀಕ ಪುರುಷರಾದ ಗುರು ಬಸವಣ್ಣನವರು ಕೊಟ್ಟ ಲಿಂಗವಂತ ಧರ್ಮಿಯರು ಎಲ್ಲಿ ಸೇರಬೇಕು ಎನ್ನುವ ವಿಚಾರ ಹೊಳೆದಾಗ ಬಸವಣ್ಣನವರ ಭವಿಷ್ಯಕ್ಕೆ ದಾರಿದೀಪವಾಗಿದ್ದ ತಪೋಭೂಮಿ, ಐಕ್ಯಸ್ಥಾನವಾದ ಕೂಡಲಸಂಗಮವನ್ನು ಬಸವ ಧರ್ಮಿಯರ ಧಾರ್ಮಿಕ ಪವಿತ್ರ ಸ್ಥಳವೆಂದು ಘೋಷಿಸಿ ಅಲ್ಲಿಯೆ ವರ್ಷಕ್ಕೊಮ್ಮೆ ಬಸವ ಭಕ್ತರನ್ನು ಸೇರಿಸುವ ಇವರಿರ್ವ ಮಹನಿಯರು ಅಂದು ಹಾಕಿದ ಬಸವತತ್ವದ ಶರಣಮೇಳ ಎನ್ನುವ ಬೀಜ ಕೇವಲ ಇಪ್ಪತ್ತು ವರ್ಷಗಳಲ್ಲಿ ವಿದೇಶಗಳಿಂದ ಭಕ್ತರನ್ನು ಕೈಬಿಸಿ ಕರೆಯುವಂತಹ ಹೆಮ್ಮರವಾಗಿ ಬೆಳೆದಿದೆ ಎಂದರೆ ಇದು ಬಸವ ಭಕ್ತರಿಗಷ್ಟೆ ಅಲ್ಲ ಕನ್ನಡ ನಾಡಿಗೆ ನುಡಿಗೆ ಹೆಮ್ಮೆ ತರುವ ಸಂಗತಿ.

ಇಂದು ಕೂಡಲಸಂಗಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಎರಿಸಿರುವ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರಿಗೆ ಸ್ಪೂರ್ತಿನಿಡಿದ್ದು ಪೂಜ್ಯ ಅಪ್ಪಾಜಿ ಮತ್ತು ಮಾತಾಜಿಯವರು ಇಲ್ಲಿ ನಿರ್ಮಿಸಿರುವ ಸುಂದರವಾದ ಶರಣಲೋಕ, ಬಸವ ಮಹಾಮನೆ,ಮಹಾಮಠವೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ,ಎಕೆಂದರೆ ಈ ಉಭಯ ಪೂಜ್ಯರು ಬಂದು ಸಂಗಮವನ್ನು ಶರಣಲೋಕವನ್ನಾಗಿ ಮಾಡದಿದ್ದರೆ ಇಂದಿಗೂ ಅದು ನಾಡಿನ ಪ್ರವಾಸಿ ತಾಣಗಳಲ್ಲಿ ಬಿಂಬಿತವಾಗುತ್ತಿದ್ದಿಲ್ಲ ಎಂಬುದು ನಾಡಿನ ಎಲ್ಲ ಬಸವಾಭಿಮಾನಿಗಳ ಅಭಿಮತವಾಗಿದೆ.
ಪ್ರತಿವರ್ಷ ಅಂದಾಜು ಆರವತ್ತು ಸಾವಿರಕ್ಕೂ ಹೆಚ್ಚು ಶರಣ-ಶರಣೆಯರು ಸಂಪೂರ್ಣ ಐದು ದಿನಗಳ ಕಾಲ ಜ್ಞಾನದಾಸೋಹ, ಅನ್ನದಾಸೋಹ ದಲ್ಲಿ ಪಾಲ್ಗೊಂಡು 'ರಕ್ತ ಸಂಭಂದಕ್ಕಿಂತ ಭಕ್ತಿ ಸಂಭಂದ ಮುಖ್ಯ' ಎಂಬುದನ್ನು ಅರಿತು ಒಂದಾಗಿ ಬೆರೆತು ಅನುಭವಿಸುವ ಆನಂದವನ್ನು ವರ್ಣಿಸಲಸಾಧ್ಯ.

ನಾಡಿನ ಮೂಲೆ ಮೂಲೆಗಳಿಂದಲ್ಲದೆ,ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ,ತಮಿಳುನಾಡು,ಮಹಾರಾಷ್ಟ್ರ,ಗೋವಾ,ದೇಹಲಿಗಳಿಂದ ಜೊತೆಗೆ ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸಹ ಈ ಶರಣಮೇಳದಲ್ಲಿ ಪಾಲ್ಗೊಂಡು ಐದು ದಿನಗಳ ಕಾಲ ತಮ್ಮ ತಮ್ಮ ಸಂತಸವನ್ನು,ತಮ್ಮ ಪ್ರದೇಶಗಳಲ್ಲಿ ಯಾವರೀತಿ ಶರಣ ತತ್ವ ಪ್ರಸಾರ ಮಾಡುತ್ತಿದ್ದಾರೆಂಬುದನ್ನು ಹಂಚಿಕೊಳ್ಳುವ ರೀತಿ ನಿಜಕ್ಕೂ ಸಂತಸ ನೀಡುತ್ತದೆ.

'ಕೂಡಲಸಂಗಮ ಶರಣಮೇಳ ಸಮೀಪ ಬಂದೈತಿ ಇಗಿಂದ ತಯಾರಾಗೊಣ' ಎಂದು ಶರಣ ಶರಣೆಯರು ತಯಾರಾಗಿ ಬಂದು ಹಣೆಯ ಮೇಲೇ ಮೂರುಬೊಟ್ಟು ವಿಭೂತಿ,ಕೊರಳಲ್ಲಿ ಇಷ್ಟಲಿಂಗ ಮತ್ತು ರುದ್ರಾಕ್ಷಿ ಧರಿಸಿ ಎದುರಿಗೆ ಬಂದವರಿಗೆ ಶರಣು ಶರಣಾರ್ಥಿ ಎನ್ನುವ ಇವರ ಶೈಲಿ ಎಂತಹ ನಾಸ್ತಿಕರನ್ನು ಒಂದು ಕ್ಷಣ ಆಸ್ತಿಕತೆಯೆಡೆಗೆ,ಆಧ್ಯಾತ್ಮಿಕತೆಯೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೆ ಇಲ್ಲ.

ಇನ್ನೂ ಐದು ದಿನದ ಕಾರ್ಯಕ್ರಮಗಳಾದರೂ ಅಂತಹವೆ,ಅರ್ಥಗರ್ಭಿತ ಆಧ್ಯತ್ಮಿಕ ಆಳವನ್ನೊಳಗೊಂಡ ವಿಚಾರಗೊಷ್ಠಿಗಳು,ಅನುಭಾವಿಗಳ ಅನುಭವದ ಕಥನಗಳು,ಪೂಜ್ಯ ಮಾತಾಜಿಯವರ ಹರಿತವಾದ ಪ್ರವಚನಗಳು,ನುರಿತ ವಿಷಯ ತಜ್ಞರ ಭಾಷಣಗಳು,ಪ್ರಸ್ತುತವಾಗಿ ನಾಡಿಗೆ ಕಾಡುತ್ತಿರುವ ಅನಿಷ್ಟ ಪದ್ದತಿಗಳು,ವಿವಾದದಲ್ಲಿರುವ ವಿಷಯಗಳ ಮೇಲೆ ಬೆಳಕು ಚೆಲ್ಲಿ ಬಸವತತ್ವದಿಂದ ಇಂತಹ ಸಮಸ್ಯೆಗಳನ್ನು ಬಸವ ತತ್ವದ ಆಧಾರದ ಮೇಲೆ ಹೇಗೆ ಹೋಗಲಾಡಿಸಬಹುದು ಎಂಬುದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶರಣಮೇಳ ಬೆಳಕು ಚೆಲ್ಲುತ್ತದೆ.

ಅಂದಾಜು 30ಲಕ್ಷ ರೂಪಾಯಿಗೂ ಹೆಚ್ಚೂ ವೆಚ್ಚದಲ್ಲಿ ನಡೆಯುವ ಈ ಶರಣಮೇಳಕ್ಕೆ ಸರಕಾರದಿಂದಾಗಲಿ,ಯಾವುದೆ ಸಂಘಸಂಸ್ಥೆಯಿಂದಾಗಲಿ ಧನ ಸಹಾಯ ಪಡೆಯದೆ ಬರಿ ಭಕ್ತಸಮೂಹದಿಂದ ಸಂಗ್ರಹಿಸಿದ ಹಣದಿಂದ ಮಾತ್ರ ನಡೆಯುತ್ತದೆ ಎಂಬುದು ಗಮನಾರ್ಹ,ಕೊಟ್ಯಾಂತರ ರೂಪಾಯಿ ವ್ಯಯಿಸಿದರು ಅಚ್ಚುಕಟ್ಟುತನದಲ್ಲಿ ಮತ್ತೆ ಮತ್ತೆ ಎಡವಟ್ಟುತನ ಮಾಡತ್ತಿರುವ ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ,ಸಾಹಿತ್ಯಸಮ್ಮೆಳನಗಳಿಗೆ ಶರಣಮೇಳ ಮಾದರಿಯಾಗಿ ನಿಲ್ಲಬಲ್ಲದು.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪ್ರತಿದಿನ ಕೋಳಿಮೊಟ್ಟೆ ನಿಡಲು ನಿರ್ಧರಿಸಿರುವ ವಿಷಯ,ಆಯಾ ಪ್ರಾಂತಿಯ ಬಸವ ಮಂಟಪಗಳಿಗೆ ಅಲ್ಲಿನ ಪ್ರಮುಖ ಶರಣರ ಹೆಸರನ್ನಿಡುವುದು ಸೇರಿದಂತೆ ಅನೇಕ ವಿಷಯಗಳು ಈ ಬಾರಿ ಶರಣಮೇಳದಲ್ಲಿ ಚರ್ಚಿತಗೊಳ್ಳಲಿವೆ,ಜೊತೆಗೆ ರಾಜ್ಯ,ರಾಷ್ಟ್ರಮಟ್ಟದ ಭರತನಾಟ್ಯ ಪಟುಗಳಿಂದ ಶರಣಸಂಸ್ಕ್ರತಿಯ ಮೇಲೆ ಬೆಳಕು ಚೆಲ್ಲುವ ಉತ್ತಮ ಕಾರ್ಯಕ್ರಮಗಳು ಸಹ ಐದು ದಿನದ ಶರಣಮೇಳಕ್ಕೆ ಮೆರಗುತರಲಿವೆ.

No comments: